i
ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದ ರೈತರು…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿ ಖಂಡಿಸಿ ಹಾಗೂ ರೈತರ ಪಂಪ್ಸೆಟ್ಗಳಿಗೆ ವಿದ್ಯುತ್ ಮೀಟರ್ ಅಳವಡಿಕೆ ವಿರೋಧಿಸಿ ಹಾಗೂ ವಿದ್ಯುಚ್ಛಕ್ತಿ ಖಾಸಗಿಕರಣ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಬೆಸ್ಕಾಂ ಮುಖ್ಯ ಇಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಮುಖ್ಯ ಇಂಜಿನಿಯರ್ ಕಚೇರಿವರೆಗೆ ನೂರಾರು ರೈತರು ಹಾಗೂ ರೈತ ಮಹಿಳೆಯರು ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅಕ್ರಮ- ಸಕ್ರಮ ಯೋಜನೆಯಡಿ ಹಣ ಕಟ್ಟಿರುವ ರೈತರ ಪಂಪ್ಸೆಟ್ಗಳಿಗೆ ಕೂಡಲೇ ವಿದ್ಯುತ್ ಪರಿವರ್ತಕ ಅಳವಡಿಸಬೇಕು ಎಂದು ರೈತರು ಆಗ್ರಹ ಮಾಡಿದರು.
ಹಾಲಿ ವಿದ್ಯುತ್ ಸಂಪರ್ಕ ಹೊಂದಿರುವ ರೈತರ ಪಂಪ್ಸೆಟ್ಗಳಿಗೆ ಓವರ್ ಲೋಡ್ ಆಗಿದ್ದು ಹೆಚ್ಚುವರಿ ವಿದ್ಯುತ್ ಪರಿವರ್ತಕ ಅಳವಡಿಸಬೇಕು. ಆಸಕ್ತ ರೈತರಿಗೆ ಶೀಘ್ರ ಸಂಪರ್ಕ ಯೋಜನೆಯನ್ನು ಮರು ಜಾರಿಗೊಳಿಸಬೇಕು. ಕೃಷಿ ಪಂಪ್ ಸೆಟ್ ಗಳಿಗೆ 7 ಗಂಟೆಗಳ ಕಾಲ ನಿರಂತರವಾಗಿ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಬೇಕು. ಅಕ್ರಮ-ಸಕ್ರಮ ಯೋಜನೆ ಅಡಿ 1500 ಕೃಷಿ ಪಂಪ್ಸೆಟ್ಗಳ ಸಂಪರ್ಕವನ್ನು ತುರ್ತು ಅನುಷ್ಠಾನಗೊಳಿಸಬೇಕು. ಕೃಷಿ ಪಂಪ್ ಸೆಟ್ ಗಳಿಗೆ ಎಳೆದಿರುವ ವಿದ್ಯುತ್ ಕಂಬ ಮತ್ತು ವೈಯರ್ ತುಂಬಾ ಹಳೆಯದಾಗಿದ್ದು ತುರ್ತಾಗಿ ಬದಲಾಯಿಸಬೇಕು. ವಿದ್ಯುತ್ ವೈಯರ್, ಕಂಬಗಳ ದುರಸ್ತಿಗೆ ಅನುದಾನ ಇಲ್ಲ ಎನ್ನುವ ನೆಪವೊಡ್ಡುತ್ತಿದ್ದು ಇದಕ್ಕೆ ಅವಕಾಶ ನೀಡದೆ ಅಗತ್ಯ ಇರುವ ಎಲ್ಲ ಕಡೆ ವಿದ್ಯುತ್ ಕಂಬ ಮತ್ತು ವೈಯರ್ ಗಳ ದುರಸ್ತಿ ಕಾರ್ಯಕ್ಕೆ ಮುಂದಾಗಬೇಕು. ಕೃಷಿ ಪಂಪ್ ಸೆಟ್ ಗಳಿಗೆ ಎಳೆಯಲಾಗಿರುವ ಮಾರ್ಗದಲ್ಲಿ ಜಂಗಲ್ ಕಟ್ಟಿಂಗ್ ಕಾರ್ಯ ಮಾಡಬೇಕು ಎಂದು ರೈತರು ಆಗ್ರಹ ಮಾಡಿದರು.
ಬೆಳೆದ ಬೆಳೆಗಳಿಗೆ ಮಾರುಕಟ್ಟೆ ದರ ನೀಡದ ಬಹುರಾಷ್ಟ್ರೀಯ ಕಂಪನಿಗಳ ಕಪಿಮುಷ್ಟಿಯಲ್ಲಿ ಸಿಲುಕಿ ರೈತರು ನರಳುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಉದ್ಧಾರಕ್ಕೆ ಗಮನ ನೀಡದೆ ವಿದೇಶಿ ಕಂಪನಿಗಳ ಓಲೈಕೆಯಲ್ಲಿ ತೊಡಗಿವೆ. ಸರ್ಕಾರ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ರೈತ ಸಂಘದ ಅಧ್ಯಕ್ಷ ಬಸ್ತಿಹಳ್ಳಿ ಸುರೇಶ್ ಬಾಬು, ರೈತ ಮುಖಂಡರಾದ ಕೆ.ಪಿ.ಭೂತಯ್ಯ, ಕೆ.ಸಿ.ಹೊರಕೇರಪ್ಪ, ನುಲೇನೂರು ಶಂಕರಪ್ಪ, ಜಿ.ಎಚ್.ತಿಪ್ಪೇಸ್ವಾಮಿ, ತಾಲೂಕು ಅಧ್ಯಕ್ಷ ಧನಂಜಯ, ಎಂ.ಬಿ.ತಿಪ್ಪೇಸ್ವಾಮಿ, ಆರ್.ಮೋಹನ್, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಪ್ರಭು, ಜಿ.ವಿ.ತಿಪ್ಪೇಸ್ವಾಮಿ, ಡಿ.ಮಲ್ಲಿಕಾರ್ಜುನ, ಟಿ.ಹಂಪಣ್ಣ, ಕೆ.ಟಿ.ಕಾಟಯ್ಯ, ಸುಧಾ, ಸಿದ್ದಮ್ಮ, ಶಿವಕುಮಾರ್, ಕಲ್ಪನಾ, ರವಿಕುಮಾರ್ ಸೇರಿದಂತೆ ಮತ್ತಿತರ ರೈತರು, ರೈತ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.