i
ಹಿರಿಯೂರು ನಗರಸಭೆಯ ವಿಚಿತ್ರ ರೂಲ್ಸ್, ಕಟ್ಟಡ ಪರವಾನಿಗೆ ಇಸಿ ಏಕೆಬೇಕು?…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರಸಭೆ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಿಸಲು ನಗರಸಭೆಯ ಪರವಾನಿಗೆ ಪಡೆಯಲು ಸಾರ್ವಜನಿಕರು ಮುಂದಾದರೆ ಇಸಿ ತರುವಂತೆ ತಾಕೀತು ಮಾಡುತ್ತಿದ್ದು ಇಡೀ ರಾಜ್ಯದಲ್ಲಿ ಎಲ್ಲೂ ಇಲ್ಲದ ರೂಲ್ಸ್ ಹಿರಿಯೂರು ನಗರಸಭೆಯಲ್ಲಿದೆ ಎಂದು ನಾಗರಿಕ ಎಲ್.ನಾರಾಯಣಚಾರ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಅವರು ಪತ್ರಿಕಾ ಹೇಳಿ ನೀಡಿ, ನಗರಸಭೆಯ ಸಿಬ್ಬಂದಿಗಳ ಕಾರ್ಯದಕ್ಷತೆ ಕೊರತೆ ಎದ್ದು ಕಾಣುತ್ತಿದೆ. ಇ-ಸ್ವತ್ತು ಫಾರಂ ನಂಬರ್ 3 ಪಡೆಯಲು ಸಾರ್ವಜನಿಕರು ನಿರಂತರವಾಗಿ ಓಡಾಡಿದ ಮೇಲೆ ಸಾಹಸ ಪಟ್ಟು ಫಾರಂ ಪಡೆಯುವುದು ಸರ್ವೇಸಾಮಾನ್ಯವಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ. ಕಟ್ಟಡ ನಿರ್ಮಾಣಕ್ಕಾಗಿ ಮಾಲೀಕನ ಮನೆ ಅಥವಾ ಖಾಲಿನಿವೇಶನದ ನಕಲು ಪತ್ರದೊಂದಿಗೆ ನಿರ್ಮಾಣ ಮಾಡಲಿರುವ ಸ್ಥಳದಲ್ಲಿ ಮಾಲೀಕನ ಫೋಟೋ, ಚಾಲ್ತಿ ಸಾಲಿನವರೆಗೂ ಕಂದಾಯ ಕಟ್ಟಿರುವ ರಶೀದಿ, ಅಂತಿಮವಾಗಿ ಅನುಮೋದನೆಯಾಗಿರುವ ಲೇಔಟ್ ನಕ್ಷೆ, ಚುನಾವಣೆ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಡಿತರ ಚೀಟಿ ಇದರಲ್ಲಿ ಯಾವುದಾದರೂ ಒಂದು ನೀಡಿದರೆ ಸಾಕಾಗಲಿದೆ. ಈ ಎಲ್ಲ ದಾಖಲಾತಿ ಕೊಟ್ಟ ಮೇಲೆ ಸಿಬ್ಬಂದಿಗಳು ಇ ಸಿ ಕೇಳುತ್ತಿರುವುದು ಎಷ್ಟು ಸರಿ, ಕಟ್ಟಡ ಪರವಾನಗಿ ನೀಡಲು ಇಸಿ ಏಕೆ ಬೇಕು? ಎಂದು ನಾರಾಯಣಾಚಾರ್ ಪ್ರಶ್ನಿಸಿದ್ದಾರೆ.
ಕಾನೂನಿ ಅರಿವಿಲ್ಲದ ಸಿಬ್ಬಂದಿಗಳು ಇಸಿ ಕೇಳುವ ಮೂಲಕ ಮೂರ್ಖತನದ ಪರಮಾವಧಿ ತನದಿಂದ ವರ್ತಿಸುತ್ತಿದ್ದಾರೆ. ಹಿರಿಯೂರು ನಗರಸಭೆಯಲ್ಲಿ ಕೆಲವರು ಮಂಜೂರಾದ ಹುದ್ದೆಗಳಲ್ಲಿ ಕೆಲಸ ನಿರ್ವಹಿಸದೆ ಇರುವುದು ಬೆಳಕಿಗೆ ಬಂದಿದೆ, ಹೀಗಾಗಿ ಕಾರ್ಯದಕ್ಷತೆ ಕೊರತೆಯಿಂದ ನಾಗರೀಕರಿಗೆ ತೊಂದರೆ ಉಂಟಾಗಿದೆ ಎಲ್ಲಿಯತನಕ ಸಾರ್ವಜನಿಕರು ಪ್ರಶ್ನೆ ಮಾಡುವುದಿಲ್ಲವೋ ಅಲ್ಲಿಯವರೆಗೂ ಈ ರೀತಿ ಅವಘಡಗಳು ನಿರಂತರವಾಗಿ ನಡೆಯುತ್ತವೆ ಎಂದು ಅವರು ತಿಳಿಸಿದ್ದಾರೆ.
ಆಸ್ತಿ ಮಾಲಿಕತ್ವದ ಬದಲಾವಣೆಗೆ 45 ದಿನಗಳು ಕಟ್ಟಡ ಪರವಾನಿಗೆ 15 ದಿನಗಳು ಕೆಲಸದ ಅವಧಿಯನ್ನು ನಿಗದಿಪಡಿಸಲಾಗಿದೆ. ಇ-ಸತ್ತು ಪಡೆಯಲು ಏಳು ದಿನ ಕಾಲಾವಧಿ ನಿಗದಿಪಡಿಸಿದೆ. ಸಕಾಲದಲ್ಲಿ ನಿಗದಿಪಡಿಸಿದ ಕಾಲಾವಧಿ ಮುಗಿದರು ಸಹ ನಿಗದಿತ ಅವಧಿಯಲ್ಲಿ ಅರ್ಜಿ ವಿಲೇವಾರಿ ಆಗದೆ ಇರುವುದು ಹಿರಿಯೂರು ನಗರಸಭೆಯ ದುರಂತವಾಗಿದೆ ಎಂದು ಅವರು ಬೇಸರ ವ್ಯಕ್ತ ಪಡಿಸಿದ್ದಾರೆ.