i
ಶಾಸಕರೇ ಖುದ್ದಾಗಿ ಸಿಬಿಐ ತನಿಖೆ ನಡೆಸಿಸಿ ನನ್ನೆದೇನು ತಪ್ಪಿಲ್ಲ ಎಂದು ಸಾಬೀತು ಮಾಡಲಿ-ಬಸವರಾಜನ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳ ಗುಣ ಮಟ್ಟ ಹಾಗೂ ಶಾಸಕರ ಭ್ರಷ್ಟಾಚಾರ ಕುರಿತು ಸಿಬಿಐ ಅಥವಾ ಲೋಕಾಯುಕ್ತ ತನಿಖೆ ನಡೆಸುವಂತೆ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಚಿತ್ರದುರ್ಗ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಾಸಕ ತಿಪ್ಪಾರೆಡ್ಡಿ ಅವರ ವಿರುದ್ಧ ಗುತ್ತಿಗೆದಾರರೊಬ್ಬರು ಮಾಡಿರುವ ಆರೋಪಕ್ಕೆ ಸಂಬಂಧಪಟ್ಟಂತೆ ಸಮಗ್ರ ತನಿಖೆಯಾದರೆ ಸತ್ಯ ಹೊರಬರಲಿದೆ ಶಾಸಕರ ತಪ್ಪಿಲ್ಲ ಎನ್ನುವುದಾದರೆ ಅವರೇ ಮುಂದೆ ನಿಂತು ತನಿಖೆ ಮಾಡಿಸಲಿ ಎಂದು ಒತ್ತಾಯಿಸಿದ್ದಾರೆ.
ಜಿಲ್ಲಾ ಕೇಂದ್ರ ಚಿತ್ರದುರ್ಗ ನಗರದಲ್ಲಿ 9೦೦ ಕೋಟಿ ರೂ.ಗೂ ಅಧಿಕ ವೆಚ್ಚದ ಕಾಮಗಾರಿ ನಡೆದಿದ್ದು ಎಲ್ಲದ್ದಕ್ಕೂ ಕಮೀಷನ್ ನೀಡಲಾಗಿದೆ ಎಂದು ಗುತ್ತಿಗೆದಾರರು ಆರೋಪಿಸಿದ್ದಾರೆ. ಇಂದಿನ ಶೇ.18ನಷ್ಟು ಜಿ.ಎಸ್.ಟಿ ಹಾಗೂ ಕಮೀಷನ್ ನೀಡಿ ಗುತ್ತಿಗೆದಾದರರು ಯಾವ ರೀತಿ ಗುಣಮಟ್ಟದ ಕಾಮಗಾರಿ ಮಾಡಲು ಸಾಧ್ಯ ಎಂದು ಬಸವರಾಜನ್ ಪ್ರಶ್ನಿಸಿದರು.
ಗುತ್ತಿಗೆದಾರರ ಆರೋಪ ಕುರಿತಾಗಲಿ, ಕಾಮಗಾರಿಗಳ ಕುರಿತಾಗಲಿ ನಾನು ಇದರಲ್ಲಿ ಯಾವುದೇ ರಾಜಕೀಯ ಮಾಡುತ್ತಿಲ್ಲ. ಸಾಮಾನ್ಯ ನಾಗರೀಕನಾಗಿ ಪ್ರಶ್ನೆ ಮಾಡುತ್ತಿದ್ದೇನೆ. ನಗರದಲ್ಲಿ ನಡೆದಿರುವ ಎಲ್ಲ ಕಾಮಗಾರಿಗಳನ್ನು ತನಿಖೆ ಒಳಪಡಿಸಬೇಕು. ಶಾಸಕರೇ ಖುದ್ದಾಗಿ ತನಿಖೆ ನಡೆಸಿ ನನ್ನೆದೇನು ತಪ್ಪಿಲ್ಲ ಎಂದು ಸಾಬೀತು ಮಾಡಲಿ ಎಂದು ಬಸವರಾಜನ್ ಆಗ್ರಹಿಸಿದ್ದಾರೆ.
ನಗರದ ಕೆಲವು ಕಡೆ ರಸ್ತೆ ಕಿರಿದಾಗಿದೆ, ಆ ರಸ್ತೆಯಲ್ಲಿ ಡಿವೈಡರ್ ಗಳನ್ನು ಅಳವಡಿಸಿ ಸಾರ್ವಜನಿಕರಿಗೆ ತೊಂದರೆ ಮಾಡಲಾಗಿದೆ ಹಾಗೂ ವಿದ್ಯುತ್ ಕಂಬಗಳನ್ನು ಸಹ ಸ್ಥಳಾಂತರ ಮಾಡಿಲ್ಲ. ಚರಂಡಿ ಮೇಲೆ ಆರ್.ಸಿ.ಸಿ ಹಾಕಿ ಮುಚ್ಚಲಾಗಿದೆ ಎಂದು ಮಾಜಿ ಶಾಸಕ ಬಸವರಾಜನ್ ದೂರಿದರು.
ಗುತ್ತಿಗೆದಾರರ ಮೇಲೆ ಕಿರುಕುಳ ಹೆಚ್ಚಾಗಿದೆ. ಕೆಲ ಗುತ್ತಿಗೆದಾರರು ಕೆಲಸ ಬಿಟ್ಟಿದ್ದಾರೆ, ಪುಣ್ಯಕ್ಕೆ ಚಿತ್ರದುರ್ಗದ ಗುತ್ತಿಗೆದಾರರ್ಯಾರು ಆತ್ಮಹತ್ಯೆ ಮಾಡಿಕೊಂಡಿಲ್ಲ ಎನ್ನುವುದೇ ಸಂತಸದ ಸಂಗತಿಯಾಗಿದೆ. ಈಗಾಗಲೇ ಥರ್ಡ ಪಾರ್ಟಿ ಪರಿಶೀಲನೆಯಾಗಿದೆ. ಸಿಬಿಐ ಅಥವಾ ಲೋಕಾಯುಕ್ತರಿಂದ ತನಿಖೆ ಮಾಡಿಸಬೇಕಿದೆ. ಇದರಿಂದ ಮಾತ್ರ ಸಂಪೂರ್ಣವಾದ ನ್ಯಾಯ ಪಡೆಯಲು ಸಾಧ್ಯವಿದೆ. ಬೇರೆ ತಾಲ್ಲೂಕಿಗೆ ಹೋಲಿಸದರೆ ಚಿತ್ರದುರ್ಗದಲ್ಲಿ ಕಮಿಷನ್ ದಂಧೆ ಹೆಚ್ಚಾಗಿದೆ. ಆರೋಪವನ್ನು ಮಾಡಿರುವ ಗುತ್ತಿಗೆದಾರರಿಗೆ ರಕ್ಷಣೆ ನೀಡಬೇಕಿದೆ ಎಂದು ಎಸ್ಕೆಬಿ ಒತ್ತಾಯಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜ್ಪೀರ್, ಮುಖಂಡ ಮೈಲಾರಪ್ಪ, ಜಿ.ಪಂ.ಮಾಜಿ ಅಧ್ಯಕ್ಷ ರವಿಕುಮಾರ್, ನಾಗರಾಜ್ ಜಾನ್ಹವಿ, ಚಿತ್ರದುರ್ಗ ತಾ.ಪಂ.ಮಾಜಿ ಅಧ್ಯಕ್ಷ ಲಿಂಗರಾಜು ಗೋಷ್ಟಿಯಲ್ಲಿ ಭಾಗವಹಿಸಿದ್ದರು.