i
ಪರಿಸರ ಚಿಂತಕನ ತೋಟಕ್ಕೆ ಬಿದ್ದ ಬೆಂಕಿ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪರಿಸರ ಚಿಂತಕ, ಸಾಹಿತಿ ಡಾ.ಸಿದ್ಧಗಂಗಯ್ಯ ಹೊಲತಾಳು ಅವರ ಐದೂವರೆ ಎಕರೆ ‘ಅಬೆತೋಸಂ‘ ತೋಟಕ್ಕೆ ಬೆಂಕಿ ಬಿದ್ದು ಸುಟ್ಟು ಬೂದಿಯಾಗಿದೆ. ವರ್ಷಕ್ಕೊಮ್ಮೆ ಅರಿವುಗೇಡಿ ದನಗಾಹಿಗಳು ಬೆಟ್ಟಕ್ಕೆ ಬೆಂಕಿ ಹಚ್ಚುತ್ತಾರೆ. ಬೆಂದ ನೆಲದ ಬೂದಿ ಮಣ್ಣಿನಲ್ಲಿ ಮುಂದೆ ಮಳೆ ಬಿದ್ದಾಗ ಹುಲ್ಲು ಮೋಪಾಗಿ ಬೆಳೆಯುತ್ತದೆಂಬ ಮೂಢ ನಂಬಿಕೆ ಅವರದು. ಸೊಂಪಾದ ಹಸಿರು ಚಿಗುರು ಹುಲ್ಲನ್ನು ಮಾತ್ರ ದೃಷ್ಟಿಯಲ್ಲಿರಿಸಿಕೊಂಡು ಬೆಟ್ಟಕ್ಕೆ ಬೆಂಕಿ ಹಚ್ಚುವ ಅಜ್ಞಾನಿಗಳ ಕಣ್ಣುಗಳಿಗೆ ಆ ಬೆಟ್ಟಗುಡ್ಡಗಳಲ್ಲಿರುವ ಅಮೂಲ್ಯವಾದ ಮರಗಿಡಗಳು, ಪ್ರಾಣಿ ಪಕ್ಷಿಗಳು ಮುಂತಾದ ಜೀವಜಾಲದ ಗೋಳಿನ ಪಾಡು ಕಾಣಿಸುವುದಿಲ್ಲ. ಇತ್ತೀಚಿಗೆ ಕೆಲವರು ಮಜಾ ಮೋಜು ಮಸ್ತಿ ನಡೆಸಲು ಇಂತಹ ಪ್ರಶಸ್ತವಾದ ಪರಿಸರದ ಮಡಿಲು ಸೇರುತ್ತಾರೆ. ಆಧುನಿಕ ಪಡ್ಡೆ ಹುಡುಗರು ಜೋಡಿಯಾಗಿ ಮೋಟಾರು ಬೈಕುಗಳಲ್ಲಿ ಇದೇ ಪರಿಸರದ ನೆರಳಿಗೆ ಹೋಗುತ್ತಾರೆ. ಇವರು ಸೇದಿ ಬಿಸಾಡಿದ ಬೀಡಿ ಸಿಗರೇಟಿನ ಚಿಕ್ಕ ಬೆಂಕಿ ಕೂಡಾ ಬೇಸಿಗೆಯಲ್ಲಿ ಒಣಗಿದ ಹುಲ್ಲಿಗೆ ದರ್ರನೆ ಹತ್ತಿಕೊಂಡು ಇಡೀ ಪರಿಸರವನ್ನೇ ಸುಟ್ಟು ಬೂದಿ ಮಾಡಬಲ್ಲದು.
ನಮ್ಮ ಪ್ರೀತಿಯ ಪರಿಸರ ಚಿಂತಕ, ಸಾಹಿತಿ ‘ಡಾ.ಸಿದ್ಧಗಂಗಯ್ಯ ಹೊಲತಾಳು‘ ಅವರ ಅಬೆತೋಸಂ ಅರಣ್ಯತೋಟ, ಕಿಡಿಗೇಡಿಗಳು ಹಾಕಿದ ಬೆಂಕಿಯ ಕೆನ್ನಾಲಗೆಗೆ ಆಹುತಿಯಾಗಿದೆ. ಅಪರೂಪದ ಗಿಡಮೂಲಿಕೆಗಳಿಗೆ ಹೆಸರುವಾಸಿಯಾಗಿರುವ ಸಿದ್ಧರಬೆಟ್ಟದ ತಪ್ಪಲಿನಲ್ಲಿರುವ ಕುರಂಕೋಟೆಯ ಹತ್ತಿರದ ಹೊಲತಾಳು ಗ್ರಾಮದ ಸಿದ್ಧಗಂಗಯ್ಯನವರು ತಮ್ಮ ಅಬೆತೋಸಂ ತೋಟದ ಐದೂವರೆ ಎಕರೆ ಜಾಗದಲ್ಲಿ ಶ್ರೀಗಂಧ, ತೇಗ ಹೊನ್ನೆ ನೇರಳೆ ಮಾವು ಬೇವು, ತೆಂಗು ಕಂಗು ಜಾಲಗಿರಿ ದೇವದಾರು ಹಲಸು ಹೀಗೆ ಸಾವಿರಾರು ಮರಗಳನ್ನು ಬೆಳೆಸಿದ್ದಾರೆ.
ತಿಪಟೂರಿನ ಕಲ್ಪತರು ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಿವೃತ್ತರಾದ ನಂತರ ಹೊಲತಾಳು ಗ್ರಾಮದ ಅಂಚಿನಲ್ಲಿರುವ ತಮ್ಮ ಪಿತ್ರಾರ್ಜಿತ ಐದೂವರೆ ಎಕರೆ ಜಮೀನಿನಲ್ಲಿ ಅರಣ್ಯಕೃಷಿಗೆ ತೊಡಗಿದರು. ನಿವೃತ್ತಿ ಹೊಂದಿದಾಗ ಪಡೆದ ಹಣವನ್ನೆಲ್ಲಾ ತೊಡಗಿಸಿ ತೋಟದಲ್ಲಿಯೇ ಕಲ್ಲುಕಟ್ಟಡದ ಬಾವಿ ಮತ್ತು ಮನೆ ಕಟ್ಟಿಸಿದರು. ಬಾವಿಯ ಜೊತೆಗೆ ಮರಗಿಡಗಳಿಗೆ ನೀರುಣಿಸುವ ಸಲುವಾಗಿ ಚೆಕ್ ಡ್ಯಾಂ, ಗೋಕಟ್ಟೆ, ಕಿರುಕುಂಟೆ ಬಾಂದಾರಗಳನ್ನು ನಿರ್ಮಿಸಿ ಸಾವಿರಾರು ವೈವಿಧ್ಯಮಯ ಮರಗಿಡಗಳನ್ನು ಬೆಳೆಸಿದರು. ಹಕ್ಕಿಪಕ್ಷಿಗಳು ಬಂದು ಸಂಸಾರ ಹೂಡಿದವು. ನವಿಲುಗಳು ಗರಿಬಿಚ್ಚಿ ಕುಣಿಯತೊಡಗಿದವು. ಹಾವು ಹಲ್ಲಿ ಹದ್ದು ಮೊಲ ನರಿ ಕರಡಿ ಉಡ ಹೋತಿ ಹೀಗೆ ನೂರಾರು ಜೀವಿಗಳಿಗೆ ಇವರು ‘ಅರಣ್ಯ ಕೃಷಿ‘ ಎಂಬ ಹೆಸರಿನಲ್ಲಿ ಬೆಳೆಸಿದ್ದ ಕಾಡೇ ಅನ್ನಕ್ಕೆ ತಟ್ಟೆಯಾಯಿತು ಹಾಗೂ ವಾಸಕ್ಕೆ ಮನೆಯಾಯಿತು. ಇವರ ತೋಟದಲ್ಲಿ ನಡೆದ ಪುಸ್ತಕ ಬಿಡುಗಡೆ ಮತ್ತು ವಿಚಾರ ಸಂಕಿರಣದಲ್ಲಿ ಕೆಲವು ಗೆಳೆಯರೊಂದಿಗೆ ಪಾಲ್ಗೊಂಡಿದ್ದ ನಾನು, ಇಲ್ಲಿಯೇ ಗಾಳಿಗುಡಿಸಲಿನಲ್ಲಿ ಕುಳಿತು ಸಿದ್ಧಗಂಗಯ್ಯನವರೊಂದಿಗೆ ಹಳ್ಳಿಯ ನಾಟಿ ಊಟದ ರುಚಿ ಸವಿದಿದ್ದೇನೆ. ಈಗ ಯಾರೋ ಕಿಡಿಗೇಡಿಗಳು ಸಿದ್ಧರಬೆಟ್ಟಕ್ಕೆ ಹಚ್ಚಿದ ಬೆಂಕಿಯ ಜ್ವಾಲೆ ಗಾಳಿಯಲ್ಲಿ ರವಳಿಕೊಂಡು ಸಿದ್ಧಗಂಗಯ್ಯನವರ ತೋಟವನ್ನು ಆಹುತಿ ತೆಗೆದುಕೊಂಡಿದೆ. ಪರಿಸರ ಸಂರಕ್ಷಣೆಯನ್ನು ಕುರಿತು ಬರೆಹ -ಭಾಷಣ – ಬದುಕಿನ ನಡೆಯ ಮೂಲಕವೂ ಅರಿವು ಮೂಡಿಸಲು ಶ್ರಮಿಸುತ್ತಿದ್ದ ಪರಿಸರ ಚಿಂತಕನ ಅರಣ್ಯ ಕೃಷಿಯ ತೋಟ ಹೀಗೆ ಸುಟ್ಟು ಕರಕಲಾಗಿರುವ ಚಿತ್ರಗಳನ್ನು ನೋಡಿ ನನ್ನ ಮನಸ್ಸು ಚೆಂಡು ಕತ್ತರಿಸಿಬಿದ್ದ ಕೋಳಿಯಂತೆ ಕರಕರನೆ ಒದ್ದಾಡುತ್ತಿದೆ.
ಬೆಟ್ಟಕ್ಕೆ ಬೆಂಕಿ ಹಚ್ಚಿ ಜೀವಮಂಡಲವನ್ನು ದಹಿಸುವ ಕೊಲೆಗಡುಕತನದ ದಾರುಣ ದೃಶ್ಯವೊಂದನ್ನು 2022 ರ ಶಿವರಾತ್ರಿ ಹಬ್ಬದ ದಿನದ ಸಂಜೆ ದೇವರಾಯನದುರ್ಗ ಹತ್ತಿರದ ಆಲದಮರದಪಾಳ್ಯದಲ್ಲಿ ಕಂಡೆ. ಮೊನ್ನೆ 2023 ರ ಫೆಬ್ರವರಿ 19 ರಂದು ಮಧುಗಿರಿ ಬೆಟ್ಟದ ಬುಡದಲ್ಲಿರುವ ಬಸವಣ್ಣನ ಗುಡ್ಡಕ್ಕೆ ಯಾರೋ ಕಿಡಿಗೇಡಿಗಳು ಹಚ್ಚಿದ ಬೆಂಕಿಯಲ್ಲಿ ಬೆಟ್ಟ ಉರಿಯುತ್ತಿದ್ದುದನ್ನು ನೋಡಿದೆ.
ಕಾಳ್ಗಿಚ್ಚನ್ನು ಕೂಡಾ ಆರಿಸಬಹುದು. ಮನುಷ್ಯನೊಳಗಿರುವ ವಿಕೃತಾನಂದ ಪಡೆಯುವ ದುರ್ಬುದ್ಧಿಯನ್ನು ಆರಿಸುವುದು ಕಡು ಕಷ್ಟ.
ಬೇಸಿಗೆಯಲ್ಲಿ ಒಣಗಿರುವ ಕಾಶಿಕಡ್ಡಿ ಬಾಧೆಹುಲ್ಲು ಲಾಲೆಕಡ್ಡಿ, ಲಂಟಾನ- ರೋಜಾನ ಗಿಡಗಳು, ನಶೆಗೆಂಟೆ, ಜೊಂಡು, ಆಪು, ಹಂಚಿಹುಲ್ಲು, ಕಲ್ಡ ಮುಂತಾದ ಒಣ ಪೊದೆಗಳು ಬೀಡಿಸಿಗರೇಟು ತುಂಡಿನ ಬೆಂಕಿ ಸೋಕಿದರೂ ಸಾಕು ಧಗ್ಗನೆ ಹತ್ತಿಕೊಳ್ಳುತ್ತವೆ. ಯಾರೋ ಕಿಡಿಗೇಡಿಗಳು ಹಚ್ಚಿದ ಬೆಂಕಿಯು, ಬೀಸು ಗಾಳಿಗೆ ರವಳಿಕೊಂಡು ತನ್ನ ಜ್ವಾಲೆಗಳ ಕೆನ್ನಾಲಗೆಗಳನ್ನು ಚಾಚಿಕೊಂಡು ಇಡೀ ಬೆಟ್ಟದ ಮೈಯನ್ನು ನೆಕ್ಕುತ್ತಿರುವಂತೆ ನನಗೆ ಕಾಣಿಸಿತು. ದೇವರಾಯನದುರ್ಗ ಬೆಟ್ಟದ ಕಾಡಿನಲ್ಲಿಯೂ ಹಲವಾರು ಕಡೆಗಳಲ್ಲಿ ಬೆಂಕಿ ಉರಿಯುತ್ತಿತ್ತು. ಕೆಲವು ಕಡೆಗಳಲ್ಲಿ ಜಾಲಾರದ ಹೂವಿನ ಮರಗಳು ಸೇರಿದಂತೆ ಅನೇಕ ಪ್ರಭೇದಗಳ ದೊಡ್ಡ ದೊಡ್ಡ ಮರಗಳು ಸುಟ್ಟುಹೋಗಿದ್ದ ದೃಶ್ಯಗಳನ್ನು ಕಂಡು ನನ್ನ ಹೃದಯ ಆರ್ದ್ರವಾಯಿತು. ಹೀಗೆ ನನ್ನ ಬಾಲ್ಯದಿಂದಲೂ ಹಲವಾರು ಬೆಟ್ಟಗುಡ್ಡ ಕುರುಚಲು ಕಾಡು ಉರಿಯುವುದನ್ನು ನಾನು ಕಂಡಿದ್ದೇನೆ. ಆಗೆಲ್ಲಾ ನನ್ನ ಹೃದಯವೇ ಬೆಂಕಿಗೆ ಬಿದ್ದು ದಹಿಸುತ್ತಿರುವಂತೆ ಯಾತನೆ ಅನುಭವಿಸಿದ್ದೇನೆ. ದಾರಿಹೋಕರಾಗಲೀ, ದನಗಾಹಿಗಳಾಗಲೀ ಅಥವಾ ಮೋಜು-ಮಸ್ತಿಗಾಗಿ ಬೆಟ್ಟ ಸೇರಿಕೊಳ್ಳುವ ಜನರಾಗಲೀ ಬೆಟ್ಟಕ್ಕೆ ಬೆಂಕಿ ಹಚ್ಚುವುದು ಬಲು ಸುಲಭ. ಬೆಟ್ಟಕ್ಕೆ ಹಚ್ಚುವ ಇವರ ಬೆಂಕಿಯಲ್ಲಿ ಸುಟ್ಟುಹೋಗುವ ಅಪಾರವಾದ ಮರಗಿಡ, ಪ್ರಾಣಿಪಕ್ಷಿ ಹಾಗೂ ಕ್ರಿಮಿಕೀಟಾದಿಗಳ ಜೀವಗಳನ್ನು ಮರಳಿ ತರಲು ಸಾಧ್ಯವೇ? ಲೇಖನ:ಸಮಾಜ ಚಿಂತಕ ಡಾ.ವಡ್ಡಗೆರೆ ನಾಗರಾಜಯ್ಯ..8722724174