i
ಹಿರಿಯೂರು ಜೆಡಿಎಸ್ ಟಿಕೆಟ್ ಕಗ್ಗಂಟ್ಟು, ಉತ್ಸಾಹ ಕಳೆದುಕೊಂಡು ಆಕಾಂಕ್ಷಿಗಳು…
ಹೆಚ್.ಸಿ.ಗಿರೀಶ್, ಹರಿಯಬ್ಬೆ
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಘೋಷಣೆ ಹಾಸನ ಕ್ಷೇತ್ರದಷ್ಟೇ ಕಂಗ್ಗಟ್ಟು ಆಗುವತ್ತಾ ಸಾಗಿದೆ.
ನಾಲ್ಕು ಮಂದಿ ಟಿಕೆಟ್ ಆಕಾಂಕ್ಷಿಗಳಾದ ಪಿಲಾಜನಹಳ್ಳಿ ಎಂ.ಜಯಣ್ಣ, ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಕುಂದಲಗುರ ಕೆ.ಜಿ.ಮೂಡಲಗಿರಿಯಪ್ಪ ಅಥವಾ ಪತ್ನಿ ಸಂಧ್ಯಾ ಮೂಡಲಗಿರಿಯಪ್ಪ, ಶ್ರವಣಗೆರೆ ಶಿವಪ್ರಸಾದ್ ಗೌಡ ಹಾಗೂ ಮುಂಗಸವಳ್ಳಿಯ ಎಂ.ರವೀಂದ್ರಪ್ಪ ಇವರುಗಳು ಜೆಡಿಎಸ್ ಟಿಕೆಟ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಆದರೆ ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರು ತೀರ್ಮಾನದಂತೆ ಟಿಕೆಟ್ ಆಕಾಂಕ್ಷಿಗಳು ಆರ್ಥಿಕ ಶಕ್ತಿ ತೋರಿಸುವಲ್ಲಿ ಇನ್ನೂ ಮೀನಾಮೇಷ ಏಣಿಸುತ್ತಿರುವುದರಿಂದ ಕುಮಾರಸ್ವಾಮಿ ಅವರು ಟಿಕೆಟ್ ಘೋಷಣೆ ಮಾಡಿಲ್ಲ. ಅಲ್ಲದೆ ಪಂಚರತ್ನ ರಥ ಯಾತ್ರೆ ಕೂಡಾ ಕೋಟೆ ನಾಡಿಗೆ ಕಾಲಿಟ್ಟಿಲ್ಲ.
ಹಾಗಾಗಿ ಟಿಕೆಟ್ ತೀರ್ಮಾನ ಆಗದಿರುವುದರಿಂದ ಈಗಾಗಲೇ ಟಿಕೆಟ್ ಆಕಾಂಕ್ಷಿಗಳಲ್ಲೇ ಉತ್ಸಾಹ ಕಮರಿ ಹೋಗುತ್ತಿದೆ ಎನ್ನಲಾಗಿದೆ. ಇದರ ಜೊತೆಯಲ್ಲಿ ಬಿಜೆಪಿ-ಕಾಂಗ್ರೆಸ್ ನಾಯಕರು ಇರಪರ ಜೆಡಿಎಸ್ ಮನೆಯನ್ನು ಖಾಲಿ ಮಾಡುವ ಕೈಂಕರ್ಯಕ್ಕೆ ಕೈ ಹಾಕಿದ್ದು ಟಿಕೆಟ್ ಘೋಷಣೆ ವಿಳಂಬವಾದಷ್ಟು ಜೆಡಿಎಸ್ ಹಿನ್ನಡೆ ಆಗುವ ಸಾಧ್ಯತೆ ಹೆಚ್ಚಾಗಿದೆ.
ನಾಲ್ಕು ಮಂದಿ ಟಿಕೆಟ್ ಆಕಾಂಕ್ಷಿಗಳು ತಮ್ಮ ಆರ್ಥಿಕ ಸಂಪನ್ಮೂಲ ಶಕ್ತಿ ತೋರಿಸಲು ಒಂದು ವೇಳೆ ವಿಫಲವಾದರೆ ಖಂಡಿತವಾಗಿಯೂ 5ನೇ ವ್ಯಕ್ತಿಗೆ ಟಿಕೆಟ್ ಹೋಗುವ ಸಾಧ್ಯತೆ ನಿಚ್ಚಳವಾಗಿದೆ.
ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಮಾಜಿ ಸಚಿವ ಡಿ.ಸುಧಾಕರ್ ಇವರುಗಳು ಎಷ್ಟೇ ಹಾರಾಟ-ಹೋರಾಟ ಮಾಡುತ್ತಿದ್ದರೂ ಜೆಡಿಎಸ್ ಅಭ್ಯರ್ಥಿ ಯಾರೆನ್ನುವುದರ ಮೇಲೆ ಬಿಜೆಪಿ ಕಾಂಗ್ರೆಸ್ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.
ಹಾಗಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಕೂಡಾ ಜೆಡಿಎಸ್ ಅಭ್ಯರ್ಥಿ ಘೋಷಣೆ ಬೇಗ ಆಗಲಿ ಎನ್ನುವ ಕೌತುಕದಲ್ಲಿದ್ದಾರೆ. ಇದರ ಮಧ್ಯೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ಪತಿ ಡಿ.ಟಿ.ಶ್ರೀನಿವಾಸ್ ಶತಗತಾಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲೇಬೇಕು ಎನ್ನುವ ಹಠದಲ್ಲಿದ್ದಾರೆ.
ಇದರ ಮಧ್ಯ ಟಿಕೆಟ್ ಆಕಾಂಕ್ಷಿಗಳಲ್ಲಿ ಒಮ್ಮತ ಮೂಡದಿರುವುದರಿಂದ ಈಗಾಗಲೇ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ಜೆಡಿಎಸ್ ಸಭೆಯಲ್ಲಿ ಎಚ್ಚರಿಸಿದಂತೆ ಯಾವುದೇ ಸಂದರ್ಭದಲ್ಲಾದರೂ ಶ್ರೀನಿವಾಸ್ ಅವರಿಗೆ ಟಿಕೆಟ್ ಹೋಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.
ಹಿರಿಯೂರು ಕ್ಷೇತ್ರದಲ್ಲಿ ಜೆಡಿಎಸ್ ಉಳಿಯಬೇಕಾದರೆ ಪ್ರಬಲ ಟಿಕೆಟ್ ಆಕಾಂಕ್ಷಿಗಳು ಬೇಗ ಒಂದು ತೀರ್ಮಾನಕ್ಕೆ ಬರಬೇಕು, ಅದೇ ರೀತಿ ರಾಜ್ಯಾಧ್ಯಕ್ಷ ಇಬ್ರಾಹಿಂ, ಮಾಜಿ ಸಿಎಂ ಕುಮಾರಸ್ವಾಮಿ ಅವರು ನಾಲ್ಕು ಮಂದಿಯನ್ನ ಕರೆದು ಇಂಥವರಿಗೆ ಟಿಕೆಟ್ ಘೋಷಣೆ ಮಾಡಲಾಗುತ್ತದೆ ಎಂದು ಹೇಳಿ ಉಳಿದವರು ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದು ಸೂಚನೆ ನೀಡಬೇಕು.
ಚಳ್ಳಕೆರೆ ಕ್ಷೇತ್ರದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಅಭ್ಯರ್ಥಿ ರವೀಶ್ ಅವರಂತೆ ಹಿರಿಯೂರು ಕ್ಷೇತ್ರಕ್ಕೂ ಬಲಿಷ್ಠ ಅಭ್ಯರ್ಥಿಯ ಹಾಕುವ ಅಗತ್ಯವಿದೆ. ಇಲ್ಲದಿದ್ದರೆ ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ ಎನ್ನುವ ಕನಸು ಕೂಡಾ ಹಾಗೇ ಕರಗಲಿದೆ. ಈ ಸತ್ಯ ಒಪ್ಪಿಕೊಂಡು ಟಿಕೆಟ್ ಆಕಾಂಕ್ಷಿಗಳು ಮತ್ತು ವರಿಷ್ಠರು ಒಂದು ತೀರ್ಮಾನಕ್ಕೆ ಬರುವುದು ಜೆಡಿಎಸ್ ಉಳುವಿಗಾಗಿ ಅನಿವಾರ್ಯವಾಗಿದೆ.