i
ಗಡಿ ಜಿಲ್ಲಾ ಘಟಕಗಳಿಗೆ ಪ್ರತಿ ಜಿಲ್ಲಾ ಘಟಕಕ್ಕೆ ಒಂದು ಲಕ್ಷ ರೂ.ಗಳ ಅನುದಾನವನು ವಿತರಣೆ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಕನ್ನಡ ಸಾಹಿತ್ಯ ಪರಿಷತ್ತಿನ ಗಡಿ ವ್ಯಾಪ್ತಿಗೆ ಬರುವ 19 ಜಿಲ್ಲಾ ಸಾಹಿತ್ಯ ಪರಿಷತ್ತಿನ ಘಟಕಗಳಿಗೆ ಆಯಾ ಜಿಲ್ಲೆಗಳ ಗಡಿ ಭಾಗದಲ್ಲಿ ಕನ್ನಡ ನಾಡು-ನುಡಿ, ಸಂಸ್ಕೃತಿಗೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ಆಯೋಜಿಸಲು ಪ್ರತಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕಕ್ಕೆ ತಲಾ ಒಂದು ಲಕ್ಷ ರೂ.ಗಳ ಅನುದಾನವನ್ನು ಇಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಛೇರಿಯಲ್ಲಿ ಗಡಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಸಿ ಸೋಮಶೇಖರ ರವರು ವಿತರಿಸಿದರು.ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕಗಳ ಆಶ್ರಯದಲ್ಲಿ ಗಡಿ ಜಿಲ್ಲೆಗಳ ಗಡಿ ಭಾಗದ ಒಂದು ಹಳ್ಳಿಯಲ್ಲಿ ಅಥವಾ ಗಡಿ ರಾಜ್ಯಕ್ಕೆ ಹೊಂದಿಕೊಂಡ ಹೊರ ರಾಜ್ಯದ ಕನ್ನಡ ಪ್ರದೇಶದಲ್ಲಿ ಆ ಗಡಿ ಭಾಗದ ಜನರ ಸಾಂಸ್ಕೃತಿಕ ಮತ್ತು ಕಲಾಪ್ರತಿಭೆಯನ್ನು ಪೆÇ್ರೀತ್ಸಾಹಿಸುವ ದೃಷ್ಟಿಯಿಂದ ಮತ್ತು ಗಡಿ ಭಾಗದ ಜನರ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ವಿಚಾರ ಗೋಷ್ಠಿ ಮತ್ತು ಸಂವಾದಗಳನ್ನು ಹಾಗೂ ಇದಕ್ಕೆ ಪೂರಕವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನೆರವಾಗುವಂತೆ ಪ್ರಾಧಿಕಾರವು ಈ ಅನುದಾನವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕಗಳಿಗೆ ನೀಡಲಾಗಿದೆ ಎಂದು ತಿಳಿಸುತ್ತಾ ಈ ಅನುದಾನದ ಜೊತೆಗೆ ಸಂಬಂಧಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕಗಳು ತಮ್ಮ ಸಂಪನ್ಮೂಲವನ್ನು ಸಹಾ ಕ್ರೋಢೀಕರಿಸಿ ಈ ಕಾರ್ಯಕ್ರಮವನ್ನು ತುಂಬಾ ಅರ್ಥಪೂರ್ಣವಾಗಿ ಆಚರಿಸಬೇಕೆಂದು ಸಭೆಯಲ್ಲಿ ಹಾಜರಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಗಡಿ ಜಿಲ್ಲೆಗಳ ಜಿಲ್ಲಾ ಘಟಕಗಳ ಅಧ್ಯಕ್ಷರುಗಳಲ್ಲಿ ಮನವಿ ಮಾಡಿದರು. ಪ್ರತಿಯೊಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕಗಳು ಆಯಾ ಗಡಿ ಭಾಗಕ್ಕೆ ಸಂಬಂಧಿಸಿದ ಒಂದೊಂದು ವಿಶಿಷ್ಟವಾದ ವಿಷಯವನ್ನು ಆಯ್ಕೆ ಮಾಡಿಕೊಂಡು ಅಂತಹ ವಿಷಯದ ಬಗ್ಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಸಲಹೆ ನೀಡಿದರು.
ಸಭೆಯಲ್ಲಿ ಹಾಜರಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಷಿ ರವರು ಕನ್ನಡ ಸಾಹಿತ್ಯ ಪರಿಷತ್ತಿನ ಗಡಿ ಜಿಲ್ಲಾ ಘಟಕಗಳಿಗೆ ಅನುದಾನ ನೀಡಿದ ಪ್ರಾಧಿಕಾರದ ಈ ಸಾಂಸ್ಕೃತಿಕ ಪ್ರಯತ್ನಕ್ಕೆ ತಮ್ಮ ಕೃತಜ್ಞತೆಯನ್ನು ಸಲ್ಲಿಸಿದರು. ಇದೇ ರೀತಿ ಮುಂದಿನ ವರ್ಷಗಳಲ್ಲಿಯೂ ಗಡಿ ನಾಡ ಜಿಲ್ಲಾ ಸಾಹಿತ್ಯ ಪರಿಷತ್ ಘಟಕಗಳಿಗೆ ಅನುದಾನ ನೀಡುವಂತಹ ಸಂಪ್ರದಾಯವನ್ನು ಮುಂದುವರೆಸಬೇಕೆಂದು ಕೋರಿದರು.
ಸಭೆಯಲ್ಲಿ 19 ಗಡಿ ಜಿಲ್ಲೆಗಳ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕಗಳ ಅಧ್ಯಕ್ಷರುಗಳು ಮತ್ತು ಅವರ ಪ್ರತಿನಿಧಿಗಳು ಹಾಜರಿದ್ದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ನೀಡಿದ ಅನುದಾನದ ಹಂಚಿಕೆ ಪತ್ರ ಹಾಗೂ ಚೆಕ್ ಸ್ವೀಕರಿಸಿದರು. ಈ ಸಭೆಯಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಪ್ರಕಾಶ ಮತ್ತೀಹಳ್ಳಿ ಉಪಸ್ಥಿತರಿದ್ದರು.