i
ರೈತರಿಗೆ ಬೆಳೆ ವಿಮೆ ಮೋಸ, ಇಬ್ಬರು ಗ್ರಾಮ ಲೆಕ್ಕಾಧಿಕಾರಿ(ವಿಎ)ಗಳ ಅಮಾನತು ಮಾಡಿದ ಜಿಲ್ಲಾಧಿಕಾರಿ…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ರೈತರಿಗೆ ಸಿಗಬೇಕಾದ ಬೆಳೆ ವಿಮೆ ಹಣವನ್ನು ಅನ್ಯರ ಖಾತೆಗೆ ಹಾಕಿ ದುರ್ಬಳಕೆ ಮಾಡಿಕೊಂಡ ಆರೋಪ ಮೇಲೆ ಇಬ್ಬರು ಗ್ರಾಮ ಲೆಕ್ಕಾಧಿಕಾರಿ(ವಿಎ)ಗಳನ್ನು ಜಿಲ್ಲಾಧಿಕಾರಿ ದಿವ್ಯಪ್ರಭು ಅಮಾನತು ಮಾಡಿ ಆದೇಶ ಮಾಡಿದ್ದಾರೆ.
ಚಿತ್ರದುರ್ಗ ಡಿಸಿ ದಿವ್ಯಪ್ರಭು ಅವರು ವಿಎ ಗಳಾದ ಮುಮ್ತಾಜ್ ಉನ್ನೀಸಾ ಮತ್ತು ಸಿರಾಜ್ ಉಲ್ ಹುಸೇಲ್ ಎಂಬ ಇಬ್ಬರನ್ನು ಅಮಾನತುಗೊಳಿಸಿ ಆದೇಶ ಮಾಡಿದ್ದು ಬೆಳೆ ವಿಮೆ ದುರ್ಬಳಕೆ ಪ್ರಕರಣದಲ್ಲಿನ ಇತರೆ ಅಧಿಕಾರಿಗಳಿಗೂ ಕಂಟಕವಾಗುವ ಸಾಧ್ಯತೆ ಇದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ಬೆಳೆ ಪರಿಹಾರ ಹಣ ದುರ್ಬಳಕೆ ಮೇಲ್ನೋಟಕ್ಕೆ ಕಂಡು ಬಂದಿತ್ತು. ಕರ್ತವ್ಯ ಲೋಪ ಎಸಗಿರುವುದರ ಕುರಿತು ಚಿತ್ರದುರ್ಗ ವಿಭಾಗಾಧಿಕಾರಿ ಚಂದ್ರಯ್ಯ, ಚಳ್ಳಕೆರೆ ತಹಶೀಲ್ದಾರ್ ಅವರುಗಳು ನೀಡಿದ ವರದಿ ಆಧರಿಸಿ ಜಿಲ್ಲಾಧಿಕಾರಿ ಇಬ್ಬರು ವಿಎಗಳನ್ನು ಅಮಾನತುಗೊಳಿಸಿದ್ದಾರೆ.
ಇದೇ ಪ್ರಕರಣದಲ್ಲಿ ಚಳ್ಳಕೆರೆ ಹಿಂದಿನ ತಹಶೀಲ್ದಾರ್ ಎನ್.ರಘುಮೂರ್ತಿ, ಕಂಪ್ಯೂಟರ್ ಆಪರೇಟರ್ ಸೇರಿ 6 ಮಂದಿ ವಿರುದ್ದ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಹಿತ್ತು. ರೈತರಿಗೆ ಸೇರಬೇಕಾದ 20 ಲಕ್ಷದ 49 ಸಾವಿರ ರೂ. ಬೆಳೆ ವಿಮೆ ಪರಿಹಾರದ ಹಣವನ್ನು ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡಿರುವ ಆರೋಪ ಕುರಿತು ಚಳ್ಳಕೆರೆ ತಾಲೂಕಿನ ತಳಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.