i
ಮೊದಲ ವರ್ಷದ ಬಿಎ ಪದವಿ ವಿದ್ಯಾರ್ಥಿನಿ ಕೊಂದ ಟೊಮ್ಯಾಟೊ…!
ಚಂದ್ರವಳ್ಳಿ ನ್ಯೂಸ್, ನ್ಯಾಮತಿ:
ಸಾವು ಯಾವಾಗ ಹೇಗೆ ಬರುತ್ತದೆ ಎನ್ನುವುದನ್ನ ಯಾರೂ ನಿರೀಕ್ಷಿಸಲು ಸಾಧ್ಯವಿಲ್ಲ. ಒಂದು ಟೊಮ್ಯಾಟೊ ಹಣ್ಣು ತಿಂದರೂ ಸಾಯಬಹುದು ಎನ್ನುವುದು ದೃಢವಾಗಿದೆ.
ಸಿಕ್ಕ ಸಿಕ್ಕ ಸ್ಥಳಗಳಲ್ಲಿನ ಹಣ್ಣು, ತರಕಾರಿ ಸೇರಿದಂತೆ ಮತ್ತಿತರ ಆಹಾರ ಧಾನ್ಯ ಸೇವನೆ ಮಾಡುವಾಗ ಎಚ್ಚರ ವಹಿಸುವುದು ಒಳಿತು.
ವಿಘ್ನ ನಿವಾರಕ ವಾಹನ ಇಲಿಯನ್ನು ಗಣಪತಿ ಹಬ್ಬದಲ್ಲಿ ಪೂಜೆ ಮಾಡುವುದು ವಾಡಿಕೆ, ಆದರೆ ಇದೇ ಇಲಿ ಸಾಯಿಸಲು ಇಟ್ಟಿದ್ದ ಟೊಮ್ಯಾಟೊ ಹಣ್ಣು ತಿಂದು ಯುವತಿಯೊಬ್ಬಳು ಮೃತಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ನ್ಯಾಮತಿ ಪಟ್ಟಣದ ಎ.ಕೆ. ಕಾಲೋನಿ ಹಾಲೇಶಪ್ಪ ಎಂಬುವರ ಮನೆಯಲ್ಲಿ ನಡೆದಿದೆ.
ಇದೇ ಗ್ರಾಮದ ಎಚ್.ಐಶ್ವರ್ಯ (21) ಮೃತ ಯುವತಿಯಾಗಿದ್ದು, ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎ ಮೊದಲ ವರ್ಷದ ವಿದ್ಯಾರ್ಥಿನಿಯಾಗಿ ಓದುತ್ತಿದ್ದರು. ಹೀಗಿರುವಾಗ ಮನೆಯಲ್ಲಿ ಯಾವಾಗಲೂ ಇಲಿಗಳ ಕಾಟ ಹೆಚ್ಚಿತ್ತು. ಮನೆಯಲ್ಲಿಟ್ಟಿದ್ದ ಸಾಮಾನುಗಳನ್ನೇಲ್ಲ ಅದು ತಿಂದು ಹಾಳು ಮಾಡುತ್ತಿತ್ತು. ಇದರಿಂದ ಬೇಸತ್ತಿದ್ದ ತಂದೆ ಹಾಲೇಶಪ್ಪ ಇಲಿಗಳನ್ನು ಸಾಯಿಸಲು ಇಲಿ ಪಾಷಾಣ ತಂದು ಟೊಮ್ಯಾಟೊ ಹಣ್ಣಿಗೆ ಮಿಶ್ರಣ ಮಾಡಿ ಇಟ್ಟಿದ್ದರು. ಸಾಮಾನ್ಯವಾಗಿ ಇಲಿಗಳಿಗೆ ಟೊಮ್ಯಾಟೊ ಕಂಡ್ರೆ ಜಾಸ್ತಿ ರುಚಿ ಇದ್ದು, ಅವುಗಳನ್ನು ಕಚ್ಚಿ ತಿನ್ನುವುದರಿಂದ ಹಾಲೇಶಪ್ಪ ಟೊಮ್ಯಾಟೊ ಹಣ್ಣಿಗೆ ವಿಷಪ್ರಾಶನ ಮಾಡಿದ್ದಾರೆ. ಇಲಿಗಳ ಕಾಟದಿಂದ ಬೇಸತ್ತಿದ್ದ ಇವರ ಮನೆಯವರು ಇಲಿ ಕೊಲ್ಲಬೇಕೆಂಬ ಉದ್ದೇಶದಿಂದ ಇಲಿ ಬರುವ ಜಾಗಕ್ಕೆ ಟೊಮ್ಯಾಟೂ ಇಟ್ಟಿದ್ದಾರೆ. ಹೀಗಿರುವಾಗ ವಿಷ ಸವರಿದ್ದ ಟೊಮ್ಯಾಟೊವನ್ನು ಐಶ್ವರ್ಯ ತಿಂದಿದ್ದಾರೆ. ಆದರೆ ಅವರು ಟೊಮ್ಯಾಟೊ ಹಣ್ಣು ತಿಂದಿರುವುದು ಯಾರಿಗೆ ಗೊತ್ತಿರಲಿಲ್ಲ. ನಂತರ ಐಶ್ವರ್ಯಗೆ ಅತಿಯಾದ ವಾಂತಿಯಾಗಿದೆ. ಆಸ್ಪತ್ರೆ ದಾಖಲಿಸಿದ್ದ ವೇಳೆ ಆಸ್ಪತ್ರೆಯಲ್ಲಿ ಹೊಟ್ಟೆಯಲ್ಲಿ ವಿಷ ಇರುವುದನ್ನು ಪತ್ತೆ ಹಚ್ಚಿದ್ದ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಐಶ್ವರ್ಯ ಶುಕ್ರವಾರ ಮತ ಪಟ್ಟಿದ್ದಾರೆ.
ಈ ಬಗ್ಗೆ ನ್ಯಾಮತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ಟಾರೆ ಇಲಿ ಸಾಯಿಸಲು ಇಟ್ಟಿದ್ದ ಟೊಮ್ಯಾಟೊ ಹಣ್ಣು ಒಂದು ಜೀವವನ್ನೇ ಬಲಿ ತೆಗೆದುಕೊಂಡಿದ್ದು, ಮನೆಯಲ್ಲಿ ನೀರವ ಮೌನ ಆವರಿಸಿದೆ.