i
ವಸತಿ ವಿದ್ಯಾಲಯದ ವಿದ್ಯಾರ್ಥಿನಿ ಸಾವು, ಶಾಲೆಯ ಮುಖ್ಯಸ್ಥ ಪೊಲೀಸ್ ಶವಕ್ಕೆ…
ಚಂದ್ರವಳ್ಳಿ ನ್ಯೂಸ್, ಸಾಗರ:
ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವು ಕಂಡಿದ್ದು ಹಲವು ಅನುಮಾನಗಳನ್ನು ಹುಟ್ಟು ಹಾಕಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ಜರುಗಿದೆ.
ಸಾಗರ ನಗರದಲ್ಲಿನ ವನಶ್ರೀ ವಸತಿ ವಿದ್ಯಾಲಯದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿ ತೇಜಸ್ವಿನಿ(13) ಸಾವಿನ ಪ್ರಕರಣ ಸಂಬಂಧ ಪೊಲೀಸರು ವಿದ್ಯಾಲಯದ ಮುಖ್ಯಸ್ಥ ವನಶ್ರೀ ಎಚ್.ಪಿ.ಮಂಜಪ್ಪ ಅವರನ್ನು ಶನಿವಾರ ಪೊಲೀಸರು ವಶಕ್ಕೆ ಪಡೆದು ತನಿಖೆ ಮಾಡುತ್ತಿದ್ದಾರೆ.
ಸೊರಬ ತಾಲೂಕಿನ ಶಿವಪುರ ಗ್ರಾಮದ 8ನೇ ತರಗತಿ ವಿದ್ಯಾರ್ಥಿನಿ ತೇಜಸ್ವಿನಿ ವನಶ್ರೀ ವಿದ್ಯಾಲಯಕ್ಕೆ ದಾಖಲಾದ 5 ದಿನಗಳಲ್ಲೇ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು ಹಲವು ಅನುಮಾನುಗಳನ್ನು ಹುಟ್ಟು ಹಾಕಿದೆ.
ಮೃತ ವಿದ್ಯಾರ್ಥಿನಿ ಕಳೆದ ಗುರುವಾರ ವಾಂತಿ ಮಾಡಿಕೊಂಡು ತೀವ್ರವಾಗಿ ಅಸ್ವಸ್ಥಗೊಂಡಿದ್ದು ಆಕೆಯನ್ನು ಶಾಲೆಯ ವಾಹನದಲ್ಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿನಿ ಅಸುನೀಗಿದ್ದಳು.
ವಿದ್ಯಾರ್ಥಿನಿಯ ಪೋಷಕರು ಹಾಗೂ ಶಿವಪುರ ಗ್ರಾಮಸ್ಥರು ಶನಿವಾರ ವರದಹಳ್ಳಿ ರಸ್ತೆಯಲ್ಲಿರುವ ವಿದ್ಯಾಲಯದ ಎದುರು ಸಾವಿನ ಕುರಿತು ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿ ತಪ್ಪಿತಸ್ಥರನ್ನು ಬಂಧಿಸುವಂತೆ ಪಟ್ಟು ಹಿಡಿದರು. ಪ್ರತಿಭಟನಕಾರರು ವಿದ್ಯಾಲಯದ ಒಳಗೆ ನುಗ್ಗಲೂ ಮುಂದಾದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನಕಾರರನ್ನು ತಡೆದು ವಿದ್ಯಾಲಯದ ಮುಖ್ಯಸ್ಥ ಮಂಜಪ್ಪ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಮಾಡುತ್ತಿದ್ದಾರೆ.
ಕಳೆದ ಐದಾರು ದಿನಗಳಿಂದೆಯಷ್ಟೇ ಮಗಳನ್ನು ವಿದ್ಯಾಲಯಕ್ಕೆ ಸೇರಿಸಿದ್ದೆವು. ಅವಳಿಗೆ ಯಾವುದೇ ಆರೋಗ್ಯದ ಸಮಸ್ಯೆ ಇರಲಿಲ್ಲ. ದಿಢೀರನೆ ಆಕೆ ಮೃತಪಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ತೇಜಸ್ವಿನಿ ಪಾಲಕರು ಸಮಗ್ರ ತನಿಖೆ ಮಾಡುವಂತೆ ದೂರು ನೀಡಿ ಒತ್ತಾಯಿಸಿದ್ದಾರೆ.
ಮೃತ ತೇಜಸ್ವಿನಿ ಕಾಲು ನೋವು ಇರುವುದಾಗಿ ಹೇಳಿದ್ದರಿಂದ ಮಂಜಪ್ಪ ಅವರು ಮುಲಾಮು ಹಚ್ಚುವ ನೆಪದಲ್ಲಿ ತಮ್ಮ ಕೊಠಡಿಗೆ ಕರೆದುಕೊಂಡು ಹೋಗಿದ್ದನ್ನು ವಿದ್ಯಾಲಯದ ಇತರೆ ವಿದ್ಯಾರ್ಥಿನಿಯರು ನೋಡಿದ್ದಾಗಿ ತಿಳಿಸಿದ್ದಾರೆ. ಬಾಲಕಿಯರು ತಂಗಿರುವ ವಸತಿ ವಿದ್ಯಾಲಯದಲ್ಲಿ ರಾತ್ರಿ ವೇಳೆ ಪುರುಷರು ಇರಲು ಅವಕಾಶ ಕಲ್ಪಿಸಿದ್ದಾದರೂ ಏಕೆ ಎಂದು ಪ್ರತಿಭಟನಕಾರರು ಪ್ರಶ್ನಿಸಿದರು.
ಅಸ್ವಸ್ಥಗೊಂಡಾಗಲೇ ಪಾಲಕರಿಗೆ ವಿಷಯ ತಿಳಿಸದೆ ಮೃತಪಟ್ಟ ನಂತರ ಮಾಹಿತಿ ನೀಡಿರುವುದು ಅನುಮಾನ ಮೂಡಿಸಿದೆ. ಮಂಜಪ್ಪ ಅವರು ಚಿಕಿತ್ಸೆಯ ನೆಪದಲ್ಲಿ ತೇಜಸ್ವಿನಿಗೆ ಬಲವಂತವಾಗಿ ಅಗಾಧ ಪ್ರಮಾಣದಲ್ಲಿ ನೀರು ಕುಡಿಸಿದ್ದಾರೆ. ಇದನ್ನೂ ವಿದ್ಯಾಲಯದ ಇತರೆ ವಿದ್ಯಾರ್ಥಿನಿಯರು ನೋಡಿದ್ದಾರೆ. ಆಕೆಗೆ ಲೈಂಗಿಕ ಕಿರುಕುಳ ನೀಡಿರುವ ಸಾಧ್ಯತೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಪೊಲೀಸರು ಸಮಗ್ರ ತನಿಖೆ ನಡೆಸಬೇಕು ಎಂದು ಪೋಷಕರು ಮತ್ತು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇದರ ಮಧ್ಯಯೇ ವನಶ್ರೀ ಸಂಸ್ಥೆಯ ಮಂಜಪ್ಪ ತಮ್ಮ ದೇಹದ ಖಾಸಗಿ ಭಾಗಗಳನ್ನು ಸ್ಪರ್ಶಿಸುವ ಮೂಲಕ ಲೈಂಗಿಕ ಕಿರುಕುಳ ನೀಡಿರುವುದಾಗಿ ವಿದ್ಯಾಲಯದ ಕೆಲ ವಿದ್ಯಾರ್ಥಿನಿಯರು ಪೊಲೀಸರಿಗೆ ದೂರಿದ್ದಾರೆ ಎನ್ನಲಾಗುತ್ತಿದ್ದು ಸಮಗ್ರ ತನಿಖೆಗೆ ಒಳ ಪಡಿಸಿದರೆ ಸತ್ಯ ಬಯಲಾಗಲಿದೆ ಎಂದು ಮೃತ ಯುವತಿಯ ಪೋಷಕರು ಆಗ್ರಹಿಸಿದ್ದಾರೆ.