i
ಕಾಲ್ಪನಿಕತೆಗಿಂತ ವೈಯಕ್ತಿಕ ಅನುಭವಗಳೇ ಕತೆಗಳ ಜೀವಾಳ- ಡಾ.ಕರಿಯಪ್ಪ ಮಾಳಿಗೆ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಸಾಹಿತ್ಯವನ್ನು ಹಲವು ಮಜಲುಗಳಿಂದ ರಚನೆ ಮಾಡುತ್ತಾರೆ. ಆದರೆ ಕಾಲ್ಪನಿಕತೆಗಿಂತ ವೈಯಕ್ತಿಕ ಅನುಭವಗಳೇ ಕತೆಗಳ ಜೀವಾಳ ಆಗಲಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು.ವೀರಲೋಕ ಪ್ರಕಾಶನ, ಬುಡಕಟ್ಟು ಸಂಸ್ಕೃತಿ ಅಧ್ಯಯನ ಹಾಗೂ ಅಭಿವೃದ್ಧಿ ಸಂಸ್ಥೆ, ಹಿರಿಯೂರು ಸಾಂಸ್ಕೃತಿಕ ಸಂಸ್ಥೆ, ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಿಂದ ನಡೆದ ದೇಶಿ ಜಗಲಿ ಕಥಾ ಕಮ್ಮಟದ ಸಮಾರೋಪದಲ್ಲಿ ಅವರು ಮಾತನಾಡಿದರು.
ಅನುಭವಗಳು ಮತ್ತು ತನ್ನ ಕಾಲದ ಅನುಭವ ಹದಗೊಂಡಾಗ ಮಾತ್ರ ಕಥೆಗಳು ಆಪ್ತವಾಗುತ್ತವೆ. ಕತೆಗಳಲ್ಲಿ ಕಾಲ್ಪನಿಕತೆಗಿಂತ ತನ್ನ ಅನುಭವಗಳಿರಬೇಕು. ಇವೆರಡೂ ಸೇರಿ ಕಟ್ಟಿದ ಕತೆಗಳು ಸಾಹಿತ್ಯಿಕ ಗುಣ ಪಡೆಯುತ್ತವೆ. ಆಧುನಿಕ ಕನ್ನಡ ಸಾಹಿತ್ಯದ ಪ್ರಕಾರಗಳಲ್ಲಿ ಅತಿ ಹೆಚ್ಚು ಬರಹಗಾರರನ್ನ ಹೊಂದಿರುವ ಕಥಾ ಸಾಹಿತ್ಯ ಈ ಹೊತ್ತು ಹಿಂದೆಂದಿಗಿಂತಲೂ ಅದಮ್ಯ ಉತ್ಸಾಹದಿಂದ ಬರೆಯುವ ಕಥೆಗಾರರನ್ನ ಈ ವಲಯ ಆವರಿಸಿಕೊಂಡಿದೆ. ಹಿರಿ ಕಿರಿಯರೆನ್ನದೆ ಎಲ್ಲಾ ವಯೋಮಾನದ ಬರಹಗಾರರ ಆಸಕ್ತಿಯ ಅಭಿವ್ಯಕ್ತಿಯಾಗಿದೆ. ಜಾಗ್ರತೀಕರಣದಿಂದಾಗುತ್ತಿರುವ ಸಾಂಸ್ಕೃತಿಕ ಪಲ್ಲಟಗಳು ಬದುಕಿನ ಆಲೋಚನಾ ಕ್ರಮವನ್ನೇ ಬದಲಿಸಿವೆ. ಆತಂಕ, ಅವಸರ, ಉದ್ವೇಗ, ಸಂಶಯಗಳು ಹೆಚ್ಚಾಗಿ ಬದುಕಿನ ನೆಮ್ಮದಿಯನ್ನು ಕಸಿದುಕೊಳ್ಳುತ್ತಿವೆ. ಮಾನವೀಯ ಮೌಲ್ಯಗಳು ಶಿಥಿಲಗೊಳ್ಳುತ್ತಿವೆ. ಸಮಾನತೆಯ ಆಶಯಗಳು, ಸೌಹಾರ್ದತೆಯ ನೆಲೆಗಳು ದೂರ ಸರಿಯುತ್ತಿವೆ. ಓದು ಮತ್ತು ಬರಹದ ಸುಖವನ್ನು ಕಳೆದುಕೊಳ್ಳುತ್ತಿದ್ದೇವೆ. ಅಪಮೌಲ್ಯಗೊಳ್ಳುತ್ತಿರುವ ಮೌಲ್ಯಗಳನ್ನ, ಸಾಮಾಜಿಕ ಸುಧಾರಣೆಯ ನೆಲೆಗಳನ್ನ, ಜೀವನ ಪ್ರೀತಿಯ ಆಶಯಗಳನ್ನ ಬಿನ್ನ ಬಿನ್ನ ನೆಲೆಗಳಲ್ಲಿ ಸಾಹಿತ್ಯದ ವಿವಿಧ ಅಭಿವ್ಯಕ್ತಿ ಕ್ರಮದಲ್ಲಿ ಕಟ್ಟಿಕೊಡಬೇಕಾದ ಕಾಲಘಟ್ಟ ಇದಾಗಿದೆ ಎಂದು ಅವರು ಹೇಳಿದರು. ವಿಶೇಷವಾಗಿ ಆಧುನಿಕ ಸಾಮಾಜಿಕ ಮಾಧ್ಯಮಗಳ ಬಳಕೆಯಲ್ಲಿಯೂ ಸಣ್ಣ ಕಥೆಗಳ ಪ್ರಯೋಗ ಯಶಸ್ವಿ ದಾರಿಯಲ್ಲಿ ನಿರಂತರವಾಗಿ ಸಾಗುತ್ತಿದೆ. ಸಾಹಿತ್ಯ ಮತ್ತು ಓದುಗರ ಮಧ್ಯೆ ಸೇತುವೆಯಂತೆ ಪತ್ರಿಕೆಗಳಲ್ಲಿ ಬರುತ್ತಿರುವ ಸಾಪ್ತಾಹಿಕ ಪುರವಣಿಗಳು ಓದುಗ ವಲಯವನ್ನು ಮತ್ತಷ್ಟು ವಿಸ್ತರಿಸಿವೆ. ಸಣ್ಣ ಕಥೆಗಳ ಜೀವಾಳ ತಂತ್ರ. ಅದು ವಸ್ತುವಿನಲ್ಲಿರಬಹುದು, ಶೈಲಿಯಲ್ಲಿರಬಹುದು, ಪಾತ್ರಗಳಲ್ಲಿರಬಹುದು. ಅಭಿವ್ಯಕ್ತಿ ಕ್ರಮದಲ್ಲಿರಬಹುದು. ಗ್ರಾಮ ಜಗತ್ತಿನಲ್ಲಾಗುತ್ತಿರುವ ಸಂಕೀರ್ಣ ಬದುಕಿನ ಸಮಸ್ಯೆ ಸವಾಲುಗಳನ್ನು ಇನ್ನು ವೈವಿಧ್ಯಮಯವಾಗಿ ಅಭಿವ್ಯಕ್ತಿಯ ಹೊಸತನದೊಂದಿಗೆ ಕಟ್ಟಿಕೊಡುವ ಕೈಚಳಕ ಕಥೆಗಾರರಲ್ಲಿ ಮೂಡಲಿವಂತಾಗಲಿ ಎಂದು ಅವರು ಆಶಿಸಿದರು.ಪ್ರಾಧ್ಯಾಪಕಿ ಡಾ.ತಾರಿಣಿ ಶುಭದಾಯಿನಿ ಕನ್ನಡ ಕಥಾ ಜಗತ್ತು ಮತ್ತು ಮಹಿಳಾ ಕಥೆಗಾರರು, ಡಾ.ಎಚ್.ವಿಜಯಕುಮಾರ್ ಸಣ್ಣಕಥೆಗಳು ಮತ್ತು ಸಮಕಾಲೀನತೆ ಕುರಿತು ವಿಷಯ ಮಂಡಿಸಿದರು.
ಕ.ಸಾ.ಪ ಮಾಜಿ ಅಧ್ಯಕ್ಷ ಧನಂಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಿಬಿರದ ನಿರ್ದೇಶಕ ಪ್ರೊ.ಚಿತ್ತಯ್ಯ. ಪ್ರಾಂಶುಪಾಲ ಡಾ.ಆರ್.ಮಹೇಶ್, ಡಾ.ಧರಣೇಂದ್ರಯ್ಯ, ಕೆ.ಎಂ.ಜಗನ್ನಾಥ್ ಇದ್ದರು. ಬಸವರಾಜ್ ಬೆಳಗಟ್ಟ ಕಾರ್ಯಕ್ರಮ ನಿರೂಪಿಸಿದರು. ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.