i
ಆಸ್ಪತ್ರೆಯಿಂದ ಪರಾರಿಯಾಗಿದ್ದ ಚಾಲಾಕಿ ಮತ್ತೆ ಸೆರೆ ಮನೆಗೆ…
ಚಂದ್ರವಳ್ಳಿ ನ್ಯೂಸ್, ಬಾಳೆಹೊನ್ನೂರು:
ಮರಗಳ ಮೇಲೆ ಮಲಗಿ ರಾತ್ರಿ ಕಳೆಯುತ್ತಿದ್ದ, ಪೊಲೀಸರಿಗೆ ಬಹುಮುಖ್ಯವಾಗಿ ಬೇಕಾಗಿದ್ದ ವಾಟೆಂಟ್ ಲಿಸ್ಟ್ನಲ್ಲಿದ್ದ ಆಸ್ಪತ್ರೆಯಿಂದ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದ ಪೂರ್ಣೇಶ್ ಮಲ್ಲೇಗೌಡನನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಈತನನ್ನು ಬಂಧಿಸಲು ಹೋದಾಗ ಪೊಲೀಸರಿಗೆ ಮಚ್ಚು ಬೀಸಿದ್ದ. ಪ್ರತಿಯಾಗಿ ಈತನ ಕಾಲಿಗೆ ಪೊಲೀಸರು ಬುಲೆಟ್ ಹಾರಿಸಿದ್ದರು. ತನ್ನ ಎಸ್ಕೇಪ್ ಬುದ್ಧಿ ಹಾಗೂ ರಾತ್ರಿ ಕಳೆಯುವ ರೀತಿಯಿಂದಲೇ ಸುದ್ದಿಯಾಗಿದ್ದ ಪೂರ್ಣೇಶನನ್ನು ಈ ಹಿಂದೆ ಪೊಲೀಸರು ಬಂಧಿಸಿದ್ದು ಸುದ್ದಿಯಾಗಿತ್ತು. ಗುಂಡೇಟು ತಿಂದ ಬಳಿಕ ಪೂರ್ಣೇಶನ ಗಾಯಕ್ಕೆ ಚಿಕಿತ್ಸೆ ನೀಡುವಾಗಲೂ ಜಿಲ್ಲಾಸ್ಪತ್ರೆಯಲ್ಲಿ ಪೊಲೀಸರ ಕಣ್ಣಪ್ಪಿಸಿ ಪರಾರಿಯಾಗಿದ್ದ. ಪೂರ್ಣೇಶ ವಿರುದ್ಧ ಕೊಲೆ ಯತ್ನ ಬೆದರಿಕೆ, ಪೊಲೀಸರ ಮೇಲೆ ಹಲ್ಲೆ ಸೇರಿದಂತೆ ಸುಮಾರು 9 ಪ್ರಕರಣಗಳಿವೆ. ಹಲವಾರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ತನ್ನ ಸ್ವಗ್ರಾಮ ಮಾಗಲು ಸಮೀಪದ ಕಾಡಿನಲ್ಲಿ ಮರಗಳ ಮೇಲೆ ದಿನ ಕಳೆಯುತ್ತಿದ್ದ ಆರೋಪಿ ಪೊಲೀಸರ ಕೈಗೆ ಸಿಗದೇ ತಪ್ಪಿಸಿಕೊಳ್ಳುತ್ತಿದ್ದ. ಪರಾರಿಯಾಗಿದ್ದ ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ಅದೃಷ್ಟಕ್ಕೆ ಕಾಲಿಗೆ ಗುಂಡೇಟು ಬಿದ್ದಿದ್ದ ಪರಿಣಾಮ ಪೂರ್ಣೇಶನಿಗೆ ಹೆಚ್ಚು ದೂರ ಹೋಗಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಸ್ವಗ್ರಾಮ ಮಾಗಲು ಸಮೀಪದಲ್ಲೇ ಅಡಗಿಕೊಂಡಿದ್ದ. ಊರಿನ ಸೇತುವೆ ಬಳಿ ಅಡಗಿದ್ದ ಆರೋಪಿಯನ್ನು ಪೊಲೀಸರು ಮತ್ತೆ ಎಚ್ಚರಿಕೆ ಕೊಟ್ಟು ಬಂಧಿಸಿದ್ದಾರೆ.