i
ಸಿಸಿ ರಸ್ತೆ ಹಾಳು ಮಾಡುತ್ತಿರುವ ನಗರಸಭೆ, ಗುಂಡಿಗಳದೇ ಕಾರುಬಾರು…
ವರದಿ-ಹೆಚ್.ಸಿ.ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಗ್ರಾಮೀ ಣ ಭಾಗದ ಬಹುತೇಕ ರಸ್ತೆಗಳು ಹದಗೆಟ್ಟು ಹಳ್ಳಿಗಳ ಜನರ ಬದುಕನ್ನು ದುಸ್ತರಗೊಳಿಸಿರುವುದನ್ನು ನೋಡಿದ್ದೇವೆಆದರೆ ಚಿತ್ರದುರ್ಗದತಂಹ ಜಿಲ್ಲಾ ಕೇಂದ್ರದಲ್ಲಿ ಗ್ರಾಮೀಣ ರಸ್ತೆಗಳ ನೈಜ ದರ್ಶನ ನಾಚುವಂತೆ ನಗರ ರಸ್ತೆಗಳು ಸಂಪೂರ್ಣ ತಗ್ಗು ಗುಂಡಿಗಳಿಂದ ಹದಗೆಟ್ಟು ಹೋಗಿವೆ.
ರಸ್ತೆಗಳಲ್ಲಿ ಗುಂಡಿ ಬಿದ್ದು ನೀರು ತುಂಬಿ ಸುಗಮ ಸಂಚಾರಕ್ಕೆ ಸಂಚಕಾರ ತರುವುದು ಒಂದು ಕಡೆಯಾದರೆ ಹತ್ತಾರು ಕೋಟಿ ರೂ.ಗಳನ್ನು ಖರ್ಚು ಮಾಡಿ ನಗರದ ತುಂಬೆಲ್ಲ ಸಿಸಿ ರಸ್ತೆಗಳನ್ನು ಮಾಡಲಾಗಿದ್ದು ಕುಡಿಯುವ ನೀರಿನ ಪೈಪ್ ಲೈನ್, ಯುಜಿಡಿ ಪೈಪ್ ಲೈನ್ ಅಂತ ಹೇಳಿಕೊಂಡು ಸಿಸಿ ರಸ್ತೆಗಳ ಕಿತ್ತು ಹಾಕಲಾಗುತ್ತಿದೆ. ಜನರ ಮತ್ತು ಬೈಕ್, ಕಾರುಗಳು ಓಡಾಡುವ ಸ್ಥಳಗಳಲ್ಲಿ ಸಿಸಿ ರಸ್ತೆ ಅಗೆದಿರುವುದರಿಂದ ಬರೀ ಗುಂಡಿಗಳದೇ ಕಾರುಬಾರು ಆಗಿದೆ. ಇಷ್ಟೇ ಆಗಿದ್ದರೆ ಹೋಗಲಿ ಎನ್ನಬಹುದು, ಆದರೆ ಮಳೆ ಮತ್ತಿತರ ಕಾರಣಕ್ಕೆ ಬಿದ್ದಿರುವ ಗುಂಡಿಗಳಿಗೆ ತೇಪೆ ಹಾಕಲು ನಗರಸಭೆಗೆ ಆಗುತ್ತಿಲ್ಲ ಎನ್ನುವುದು ಸೋಜಿಗವಾಗಿದೆ. ಪ್ರಸಕ್ತ ಸಾಲಿನಲ್ಲೇನು ಭಾರಿ ಮಳೆ ಸುರಿದಿಲ್ಲ, ಆದರೂ ರಸ್ತೆಗಳಲ್ಲಿ ಸಾಕಷ್ಟು ಗುಂಡಿಗಳು ಬಿದ್ದಿರುವುದನ್ನು ನೋಡಿದರೆ ನಗರಸಭೆಯ ಗುಣಮಟ್ಟದ ಕಾಮಗಾರಿಯ ನೈಜ ಬಣ್ಣ ಬಯಲಾಗಿದೆ. ಚಿತ್ರದುರ್ಗದಂತಹ ಪ್ರದೇಶದಲ್ಲಿ ಸ್ವಲ್ಪ ಮಳೆ ಬಂದರೂ ಗುಂಡಿ, ತಗ್ಗು ಬಿದ್ದಿರುವ ರಸ್ತೆಗಳಲ್ಲಿ ಜನರು ಓಡಾಡುವುದು ಕಷ್ಟ. ಆದರೂ ನಗರಸಭೆ ಸೇರಿದಂತೆ ಸಂಬಂಧಿಸಿದವರು ಗುಂಡಿ, ತಗ್ಗು ಬಿದ್ದಿರುವ ರಸ್ತೆಗಳನ್ನು ಸರಿಪಡಿಸಿಕೊಡಬೇಕು ಸಾರ್ವಜನಿಕರು ಆಗ್ರಹಿಸಿದ್ದಾರೆ.ನಗರದ ಬಿದ್ದಿರುವ ಗುಂಡಿ ತಗ್ಗುಗಳ ಕಾರುಬಾರಿನಿಂದಾಗಿ ಕೆಲವು ಪ್ರಮುಖ ರಸ್ತೆಗಳು ಸೇರಿ ಒಳ ಪ್ರದೇಶಗಳಲ್ಲಿ ರಸ್ತೆಗಳನ್ನು ಹುಡುಕಿ ಗುಂಡಿ, ತಗ್ಗು ಬಿದ್ದಿಲ್ಲದ ರಸ್ತೆಗಳಲ್ಲಿ ವಾಹನ ಸಂಚಾರಮಾಡಬೇಕಾದ ಪರಿಸ್ಥಿತಿ ಇದೆ. ರಸ್ತೆ ಹಾಳಾಗಿವರ್ಷಗಳೇ ಕಳೆದರೂ ದುರಸ್ತಿಗೆ ನಗರಸಭೆ ಅಧಿಕಾರಿಗಳು ಮನಸ್ಸು ಮಾಡಿಲ್ಲ. ಹೀಗಾಗಿ ರಸ್ತೆ ಮಧ್ಯೆ ದೊಡ್ಡ ಗುಂಡಿಗಳು ನಿರ್ಮಾಣವಾಗಿ ಸಂಚಾರಕ್ಕೆಅಸಾಧ್ಯದ ಪರಿಸ್ಥಿತಿ ತಂದೊಡ್ಡಿವೆ. ಇನ್ನೂ ಕೆಲವು ಬೀದಿಗಳಲ್ಲಿ ಚರಂಡಿ, ಕೊಳಚೆ ನೀರು ಹರಿದುಹೋಗಲು ಜಾಗವಿಲ್ಲದೆ ರಸ್ತೆಯಲ್ಲೇ ನೀರು ನಿಲ್ಲುತ್ತಿದೆ. ನಗರಸಭೆ, ಜಿಲ್ಲಾಡಳಿತ ವಿರುದ್ಧ ಪ್ರಯಾಣಿಕರು ಹಾಗೂ ವಾಹನ ಚಾಲಕರು ನಿತ್ಯವೂ ಹಿಡಿ ಶಾಪ ಹಾಕುತ್ತಿದ್ದಾರೆ. ರಾತ್ರಿ ವೇಳೆ ವಾಹನ ಸವಾರರು ಗುಂಡಿ ತಪ್ಪಿಸುವ ಸಮಯದಲ್ಲಿ ಸಣ್ಣಪುಟ್ಟ ಅಪಘಾತಗಳು ನಡೆದಿವೆ. ಮಳೆ ಬಂದಾಗ ಬೈ ಕ್ ಸವಾರರು ಆಯ ತಪ್ಪಿ ನೆಲಕ್ಕೆ ಬಿದಿದ್ದಾರೆ. ಅಧಿಕಾರಿಗಳು ಈ ಕಡೆ ತಲೆ ಹಾಕಿಲ್ಲ ಎಂದು ವಾಹನ ಚಾಲಕರು ದೂರುತ್ತಾರೆ. ಕೋಟನಾಡು ಚಿತ್ರದುರ್ಗ ನಗರದಲ್ಲಿ ಎಲ್ಲಿ ನೋಡಿದರಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು ರಸ್ತೆ ತುಂಬೆಲ್ಲಾ ಗುಂಡಿಗಳದೇ ಕಾರುಬಾರು. ಬಹುತೇಕ ಮುಖ್ಯ ರಸ್ತೆಗಳು ನಗರದ ಪ್ರಮುಖ ರಸ್ತೆಗಳು ಸೇರಿದಂತೆ ಎಲ್ಲಾ ಕಡೆಗಳಲ್ಲಿ ಗುಂಡಿಗಳು ಕಾಣಸಿಗುತ್ತವೆ.
ನಗರದ ಜನ ವಸತಿ ಪ್ರದೇಶಗಳಲ್ಲಿ ಅಭಿವೃದ್ಧಿ ಹೆಸರಲ್ಲಿ ಒಂದಿಲೊಂದು ಕಾಮಗಾರಿಗಳನ್ನು ನೆಡೆಸಲಾಗುತ್ತಿದೆ. ಕಳೆದ ಕೆಲವು ವರ್ಷಗಳ ಹಿಂದೆ ಕೋಟೆನಾಡು ಚಿತ್ರದುರ್ಗ ರಸ್ತೆ ಇಕ್ಕೆಲಗಳಲ್ಲಿ ಬೃಹದಾಕಾರದ ಮರಗಳು ಹಾಗೂ ಉದ್ಯಾನವನಗಳು ನೋಡುಗರ ಕಣ್ಮನ ಸೆಳೆಯುತ್ತಿದ್ದವು. ನಗರದ ಮುಖ್ಯ ರಸ್ತೆಯಲ್ಲಿ ಸಾಗುತಿದ್ದರೆ ಕಾಡಿನ ಮಧ್ಯೆ ಸಾಗುತಿದ್ದ ಅನುಭವವಾಗುತಿತ್ತು. ನಗರದ ಪ್ರಮುಖ ರಸ್ತೆಗಳಾದ ಜೋಗಿಮಟ್ಟಿ ರಸ್ತೆ, ಸ್ಟೇಡಿಯಂ ರಸ್ತೆ, ಸರ್ಕಾರಿ ಆಸ್ಪತ್ರೆ ಮುಭಾಗದ ತುರುವನೂರು ರಸ್ತೆ, ಹೊಳಲ್ಕೆರೆ ರಸ್ತೆ, ದಾವಣಗೆರೆ ರಸ್ತೆ, ಜೆಸಿಆರ್ ರಸ್ತೆ ಹೀಗೆ ಹಲವು ರಸ್ತೆಗಳಲ್ಲಿ ನೂರಾರು ವರ್ಷಗಳಿಂದ ಸೊಗಸಾಗಿ ಬೆಳೆದಿದ್ದ ಮರಗಳನ್ನು ರಸ್ತೆ ಅಭಿವೃದ್ಧಿ ಹೆಸರಲ್ಲಿ ಕಡಿದು ಹಾಕಲಾಗಿದೆ. ಅಭಿವೃದ್ಧಿ ಹೆಸರಲ್ಲಿ ಮರಗಳ ಮಾರಣ ಹೋಮ ನೆಡೆದು ಹೋಗಿ ಸಿಸಿ ರಸ್ತೆಗಳ ಝಳ ಕಣ್ಣಿಗೆ ರಾಚುತ್ತದೆ.
ರಸ್ತೆ ನಿರ್ಮಾಣದ ಸಮಯದಲ್ಲಿ ಕೆಲವೊಂದು ಮಾನದಂಡಗಳನ್ನು ಅನುಸರಿಸಿ ರಸ್ತೆ ನಿರ್ಮಾಣ ಮಾಡಬೇಕಾಗಿದ್ದು ಅನುಷ್ಠಾನ ಸಂಸ್ಥೆ, ಗುತ್ತಿಗೆದಾರರ ಹೊಣೆಗಾರಿಕೆ. ಆದರೆ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ತಮಗೆ ಬೇಕಾದಾಗೆ ಬೇಕಾಬಿಟ್ಟಿ ರಸ್ತೆ ನಿರ್ಮಾಣ ಮಾಡಿದಂತೆ ತೋರುತ್ತಿದೆ. ರಸ್ತೆ ಮಧ್ಯೆ ಯುಜಿಡಿ ಪೈಪ್ ಲೈನ್ ಅಳವಡಿಸಲಾಗಿದ್ದು ಮ್ಯಾನ್ ಹೋಲ್ ಗುಂಡಿಗಳಿಗೆ ಅಳವಡಿಸಿರುವ ಮುಚ್ಚಳಗಳು ಕೆಲವೊಂದು ಕಡೆಗಳಲ್ಲಿ ಬಾಯ್ತೆರೆದುಕೊಂಡಿವೆ. ಮತ್ತೆ ಕೆಲವು ಕಡೆಗಳಲ್ಲಿ ರಸ್ತೆಗಳಿಗಿಂತ ಅರ್ಧ ಅಡಿ ಆಳದವರೆಗೆ ಗುಂಡಿಗಳಿವೆ. ಇದರಿಂದ ಹಲವು ವಾಹನ ಸವಾರರು ಬಿದ್ದು ಕೈ ಕಾಲು ಗಾಯಮಾಡಿಕೊಂಡ ಉದಾಹರಣೆಗಳಿವೆ. ರಸ್ತೆ ನಿರ್ಮಾಣ ಮಾಡಿದರಷ್ಟೆ ಸಾಲದು ಅವುಗಳ ಸೂಕ್ತ ನಿರ್ವಹಣೆ ಮಾಡುವುದು ಅಷ್ಟೇ ಮುಖ್ಯ.
ರಸ್ತೆ ಹಾಳು- ಚಿತ್ರದುರ್ಗ ನಗರದ ಚಳ್ಳಕೆರೆ ಟೋಲ್ ಗೇಟ್ ಸಮೀಪದ ನ್ಯಾಷನಲ್ ಹೋಟೆಲ್ ಮುಂಭಾಗದಲ್ಲಿ ನಾಲ್ಕು ಕಡೆಗಳಿಂದ ವಾಹನಗಳು, ಶಾಲಾ ಕಾಲೇಜ್ ಗಳ ಮಕ್ಕಳು ಓಡಾಡುತ್ತಾರೆ. ಈ ಜಾಗದಲ್ಲಿ ಬಿದ್ದಿರುವ ರಸ್ತೆ ಗುಂಡಿ ಜೀವಕ್ಕೆ ಸಂಚಕಾರವಂತಿದೆ. ಕನಿಷ್ಠ ದುರಸ್ಥಿ ಕಾರ್ಯ ಮಾಡಿಲ್ಲ. ಇನ್ನೂ ಕೆಳಗೋಟೆಯ ಅಕಾಶವಾಣಿ, ಸುನೀತಾ ನರ್ಸಿಂಗ್ ಹೋಮ್, ಏಕಲವ್ಯ ಸರ್ಕಲ್, ಸಿಕೆ ಪುರ ಮುಖ್ಯ ರಸ್ತೆ, ಸರ್ಕಾರಿ ವಿಜ್ಞಾನ ಮತ್ತು ಸರ್ಕಾರಿ ಕಲಾ ಕಾಲೇಜ್ ಗಳ ಮಧ್ಯ ಹಾದು ಹೋಗಿರುವ ರಸ್ತೆಯಲ್ಲಿ ಬೇಕಾಬಿಟ್ಟಿ ಸಿಸಿ ರಸ್ತೆಗಳನ್ನು ಅಗೆದು ಹಾಗೆ ಬಿಡಲಾಗಿದೆ. ಇದಲ್ಲದೆ ನಗರದ ಬಹುತೇಕ ಕಡೆಗಳಲ್ಲಿ ಸಿಸಿ ರಸ್ತೆಗಳನ್ನು ಅಗೆದು ಮುಚ್ಚದೆ ಗುಂಡಿಯ ಸುತ್ತಮುತ್ತಾ ಯಾವುದೇ ರೀತಿ ತಡೆ ಗೋಡೆ ಅಥವಾ ಸೂಚನಾ ಫಲಕಗಳನ್ನು ಹಾಕದೆ ಕಾಮಗಾರಿಗಳನ್ನು ಮಾಡಿ ಅರ್ಧಕ್ಕೆ ನಿಲ್ಲಿಸಿರುವುದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕಾರ್ಯ ವೈಖರಿಯನ್ನು ತೋರಿಸುತ್ತದೆ.ಗುತ್ತಿಗೆದಾರರು ತಮಗೆ ಬೇಕಾದ ಕಡೆಗಳಲ್ಲಿ ಬೇಕಾಬಿಟ್ಟಿ ಗುಂಡಿಗಳನ್ನು ತೋಡಲಾಗಿದ್ದು ದಿನ ನಿತ್ಯ ಸಾವಿರಾರು ಜನರು, ನೂರಾರು ವಾಹನಗಳು, ಆಸ್ಪತ್ರೆಗೆ ಬರುವ ರೋಗಿಗಳು, ವೃದ್ಧರು, ಚಿಕ್ಕ ಮಕ್ಕಳು, ಶಾಲಾ ಕಾಲೇಜ್ ಗಳಿಗೆ ತೆರಳು ವಿದ್ಯಾರ್ಥಿಗಳು ವಯೋವೃದ್ಧರು ಓಡಾಡುವ ರಸ್ತೆಗಳಲ್ಲಿ ತಗ್ಗು ಗುಂಡಿಗಳನ್ನು ಕೂಡಲೆ ಮುಚ್ಚಿಸಬೇಕು. ಹಾಗೂ ಹಾಳಾಗಿರುವ ರಸ್ತೆಯನ್ನು ಶೀಘ್ರವಾಗಿ ದುರಸ್ಥಿ ಮಾಡಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.